ಆಲೂರು ತಾಲೂಕಿನ ಸಂತೆಬಸವನಹಳ್ಳಿ ಗ್ರಾಮದಲ್ಲಿ ತಂದೆಯೊಬ್ಬ ತನ್ನ ಮಗನನ್ನೇ ಹಣದ ವಿವಾದದಲ್ಲಿ ಕೊಂದು, ಶವವನ್ನು ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತು ಹಾಕಿದ್ದ ಆಘಾತಕಾರಿ ಘಟನೆ ಎರಡು ವರ್ಷಗಳ ನಂತರ ಬೆಳಕಿಗೆ ಬಂದಿದೆ.ಕೊಲೆಯಾದವನು ರಘು (32), ಆರೋಪಿಯಾದ ಗಂಗಾಧರನ ಮಗ. ವಿವಾಹವಾಗಿ ವಿಚ್ಛೇದನ ಪಡೆದಿದ್ದ ರಘು, ತಂದೆ ಗಂಗಾಧರನನ್ನು ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ವಿಷಯವು ಜಗಳಕ್ಕೆ ಕಾರಣವಾಗಿ, ತಾರಕಕ್ಕೇರಿದ ವಿವಾದದಲ್ಲಿ ಗಂಗಾಧರ ತನ್ನ ಮಗನನ್ನು ಹೊಡೆದು ಕೊಂದಿದ್ದಾನೆ. ನಂತರ, ಮತ್ತೊಬ್ಬ ವ್ಯಕ್ತಿಯ ಮಗನ ಜೊತೆ ಸೇರಿ ರಘುವಿನ ಶವವನ್ನು ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತು ಹಾಕಿದ್ದಾನೆ.

ಕೆಲ ದಿನಗಳ ಹಿಂದೆ ಆರೋಪಿ ಗಂಗಾಧರ ಸಾವನ್ನಪ್ಪಿದಾಗ, ಅವನ ಅಂತ್ಯಸಂಸ್ಕಾರಕ್ಕೆ ರಘುವನ್ನು ಕರೆಸುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಗಂಗಾಧರನ ಇನ್ನೊಬ್ಬ ಮಗ ರೂಪೇಶ್‌ಗೆ ರಘುವನ್ನು ಫೋನ್‌ನಲ್ಲಿ ಕರೆಯಲು ಒತ್ತಡ ಹೇರಿದಾಗ, ರೂಪೇಶ್ ಕೊಲೆಯ ರಹಸ್ಯವನ್ನು ಬಾಯ್ದಿಟ್ಟಿದ್ದಾನೆ. ಈ ಬಗ್ಗೆ ಗಂಗಾಧರನ ಸಂಬಂಧಿ ಪಾಲಾಕ್ಷ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಇಂಗು ಗುಂಡಿಯಿಂದ ರಘುವಿನ ದೇಹದ ಮೂಳೆಗಳನ್ನು ಹೊರತೆಗೆದಿದ್ದಾರೆ. ಈ ಮೂಳೆಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಆಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave comment

Your email address will not be published. Required fields are marked with *.